ಕಬ್ಬು ಬೆಳೆಗಾರರ ಪ್ರತಿಭಟನೆ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿರಬಹುದು. ಅದನ್ನು ನಿವಾರಣೆ ಮಾಡುವತ್ತ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಈ ಕಾರ್ಖಾನೆಗಳು ನೀಡುತ್ತ ವೆಯೇ ಒಂದು ವೇಳೆ ಬೆಂಬಲ ಬೆಲೆ ನೀಡದೆ ಹೋದರೆ ಅಂತಹ ಕಾರ್ಖಾನೆಗಳನ್ನು ಮುಚ್ಚಿಸುವ ಅಥವಾ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ದಿಟ್ಟತನವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರಾ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.
ರಾಜ್ಯದಲ್ಲಿ ಬಹುತೇಕ ಕಾರ್ಖಾನೆಗಳು ರಾಜಕೀಯ ನಾಯಕರ ಕೈವಶದಲ್ಲಿವೆ. ಬಂಡವಾಳಶಾಹಿ ರಾಜಕೀಯ ನಾಯಕರು ಸರ್ಕಾರ ಘೋಷಣೆ ಮಾಡಿದ ಬೆಲೆ ಯಾವುದೇ ಕಾರಣಕ್ಕೂ ನೀಡಲು ಸಾಧ್ಯವಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ.
ಸಕ್ಕರೆ ಖಾತೆ ನಿರ್ವಹಣೆ ಮಾಡುತ್ತಿರುವ ಸಚಿವ ಪ್ರಕಾಶ್ ಹುಕ್ಕೇರಿಯವರ ಒಡೆತನದಲ್ಲಿಯೂ ಹಲವು ಕಾರ್ಖಾನೆಗಳಿವೆ. ಇಲ್ಲಿ ಖಾತೆ ನಿರ್ವಹಣೆ ಮಾಡುವುದಕ್ಕಿಂತ ಮುಖ್ಯವಾಗಿ ಕಾರ್ಖಾನೆ ಉಳಿಸಿಕೊಳ್ಳುವಲ್ಲಿಯೇ ತಮ್ಮ ಚಾಣಾಕ್ಷತನ ತೋರಿಸಬೇಕಾದ ಅನಿವಾರ್ಯತೆ ಹುಕ್ಕೇರಿಯವರಿಗಿದೆ.
ಈ ಪ್ರಭಾವಿ ರಾಜಕಾರಣಿಗಳ ಹಿಡಿತದಲ್ಲಿ ಕಾರ್ಖಾನೆಗಳಿರುವುದರಿಂದ ‘ಶುಗರ್ ಲಾಬಿ’ ಹೆಚ್ಚಾಗಿದೆ. ಕಬ್ಬು ದರ ನಿಗದಿ ವಿಚಾರ ಬಿಕ್ಕಟ್ಟು ಸೃಷ್ಟಿಸಿದೆ. ಜತೆಗೆ ಕಬ್ಬಿನ ಸಮಸ್ಯೆ ಹೆಚ್ಚಾದಷ್ಟು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಪ್ರತಿಪಕ್ಷಗಳು ಮತ್ತು ರೈತ ನಾಯಕರು ಹವಣಿಸುತ್ತಿದ್ದಾರೆ. ಸರ್ಕಾರ ಮತ್ತು ಕಾರ್ಖಾನೆಗಳ ಮಧ್ಯೆ ನಡೆದ ಈ ಶೀತಲ ಸಮರದಿಂದ ರೈತರು ಮತ್ತೆ ಪ್ರತಿಭಟನೆಯ ದಾರಿ ಹಿಡಿಯದೆ ವಿಧಿಯಿಲ್ಲ.
ಸರ್ಕಾರದಿಂದ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಸದುಪಯೋಗಪಡಿಸಿ ಕೊಂಡು ಸೂಚಿಸಿದ ಬೆಂಬಲ ಬೆಲೆ ನೀಡುವುದಿಲ್ಲ ಎಂದರೆ ಈ ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ಸರ್ಕಾರ ನಡೆಯುತ್ತಿದೆ ಎಂದೇ ಸ್ಪಷ್ಟ. ಹಾಗಾದರೆ ಈ ಸರ್ಕಾರ ಅಂತಹ ಕಾರ್ಖಾನೆಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಾರದೇಕೆ? ಅಥವಾ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ನೀಡದೆ ಇದ್ದ ಕಂಪೆನಿಗಳನ್ನು ಸೂಪರ್ಸೀಡ್ ಮಾಡಬಾರದೆ? ಒಂದು ವೇಳೆ ಸರ್ಕಾರ ಅಂತಹ ನಿರ್ಧಾರ ತೆಗೆದುಕೊಳ್ಳಲು ಮುಂದಾದರೆ ಜೇನುಗೂಡಿಗೆ ಕೈಹಾಕಿದಂತೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬೀಳುವುದರಲ್ಲಿ ಸಂಶಯವೇ ಇಲ್ಲ. ಈಗಾಗಲೇ ಕೆಲವು ಸಚಿವರ ಕಾರ್ಯವೈಖರಿಗೆ ಬೇಸತ್ತ ಶಾಸಕರು ಹೈಕಮಾಂಡ್ಗೆ ಕಿವಿ ಊದಿದ್ದಾರೆ. ಇದನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣನಡೆ ಇಟ್ಟಿದ್ದಾರೆ. ಸಚಿವರ ಬಗ್ಗೆ ಕ್ರಮಕೈಗೊಂಡರೆ ನಾನು ಅದಕ್ಕೆ ಹೊಣೆಯಲ್ಲ ಎಂದು ಈಗಾಗಲೇ ಬಿಸಿ ಮುಟ್ಟಿಸಿದ್ದಾರೆ. ಒಂದೆಡೆ ರಾಜ್ಯಪಾಲರು ಸಚಿವರ ಕಾರ್ಯವೈಖರಿಗೆ ಛಾಟೀ ಬೀಸಿದರೆ ಮತ್ತೊಂದಡೆ ಅತೃಪ್ತ ಶಾಸಕರು ಒಳಗೊಳಗೆ ಕತ್ತಿ ಮಸೆಯುತ್ತಿದ್ದಾರೆ.