Wednesday 9 January 2013

ಜಾನಪದ ಸಂಗೀತ ಸಾಮ್ರಾಟ್ ಡಾ.ಬಾನಂದೂರು ಕೆಂಪಯ್ಯ

 ಧರ್ಮ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆಗೈದು ತಮ್ಮ ಪ್ರತಿಭೆಯಿಂದ ನಾಡಿನ ಕೀರ್ತಿ ಪತಾಕೆಯನ್ನು ದೇಶ ವಿದೇಶಗಳಿಗೆ ಹರಡಿದ ವ್ಯಕ್ತಿಗಳು, ಕವಿಗಳು ಕಲಾವಿದರು ಸಂಗೀತಗಾರರು ಬಹಳಷ್ಟು ಜನರಿದ್ದಾರೆ. ಕನ್ನಡ ನಾಡು ಇಂತಹ ಕೀರ್ತಿವಂತರಿಗೆ ವಾಸಸ್ಥಾನ, ಸಂಗೀತ ಕಲಾರತ್ನಗಳಿಗೆ ತವರು ಮನೆ.
ಕರ್ನಾಟಕ ಜಾನಪದ ಸಂಗೀತ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ ನಾಡಿನ ಪ್ರಮುಖ ಜನಪದ ಸಂಗೀತ ಶ್ರೇಷ್ಠರಲ್ಲಿ ಡಾ. ಬಾನಂದೂರು ಕೆಂಪಯ್ಯ ಒಬ್ಬರಾಗಿದ್ದಾರೆ. ಕೆಂಪಯ್ಯನವರು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಬಾನಂದೂರಿನಲ್ಲಿ ವೆಂಕಯ್ಯ ಮತ್ತು ಹುಚ್ಚಮ್ಮ ದಂಪತಿಯ ಮಗನಾಗಿ ೧೯೫೧ರ ಜೂನ್ ೧೪ರಂದು ಜನಿಸಿದರು.
ಇವರದು ಜನಪದ ಗಾಯಕ ಮನೆತನ. ಇದು ಕೆಂಪಯ್ಯನವರಿಗೆ ಈ ಕ್ಷೇತ್ರದಲ್ಲಿ ಆಸಕ್ತಿ ಮೂಡಲು ಕಾರಣವಾಗಿರಬಹುದು. ಇವರ ಹಿರಿಯ ಸಹೋದರ ಆರು ನಗಾರಿ ಬಾರಿಸುವ ಪರಿಣತಿ ಪಡೆದಿದ್ದರಿಂದ ನಗಾರಿ ಸಿದ್ದಯ್ಯನೆಂದೇ ಖ್ಯಾತರಾದವರು. ಮೇಲ್ವರ್ಗದ ಕಲಾವಿದರು ಜಾನಪದ ಸಂಗೀತವೆಂದರೆ ಬಿರುಗಣ್ಣಿನಿಂದ ನೋಡುವ ಕಾಲವದು.
ಅದರಲ್ಲೇನಿದೆ ಆಡುವ ಭಾಷೆಯನ್ನು ನುಡಿಸುವ ಸಂಗೀತಕ್ಕೆ ಅಳವಡಿಸಿದರಾಯ್ತು ಎಂದು ಗೇಲಿ ಮಾಡುತ್ತಿದ್ದ ದಿನಗಳಲ್ಲಿ ಹಳ್ಳಿ ಹಳ್ಳಿಗೆ ಅಲೆದು ಜಾನಪದಗಳನ್ನು ಸಂಗ್ರಹ ಮಾಡಿ ತನ್ನ ಸುಮಧುರ ಕಂಠದಿಂದ ಹಾಡಿ ಕನ್ನಡ ನಾಡಿನ ಕಲಾರಸಿಕರನ್ನು ಮೋಡಿ ಮಾಡಿದ ಮಹಾನ್ ಸಂಗೀತಗಾರ.