ರಾಜ್ಯದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ದಕ್ಕಿದೆ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ನಾಯಕ ಸಿಎಂ ರೇಸ್ನಲ್ಲಿ ಕೊನೆವರೆಗೂ ಸತತ ಪ್ರಯತ್ನ ಮಾಡಿ ವಿಫಲರಾದ ಖರ್ಗೆಯವರಿಗೆ ಕಾಂಗ್ರೆಸ್ ಹೈಕಮಾಂಡ್ ಕೈಕೊಡುವುದರ ಮೂಲಕ ತನ್ನ ಹಳೇ ಛಾಳಿ ಮುಂದುವರಿಸಿದೆ.
ಸಿ.ಎಂ. ರೇಸ್ನಲ್ಲಿsದ್ದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಲ್ಲಿ ಒಬ್ಬರಿಗಾದರೂ ಕಾಂಗ್ರೆಸ್ ಗುರುತ್ತಿಸುತ್ತದೆ ಎಂಬ ಸಮುದಾಯದ ಮಹದಾಸೆ ಹುಸಿಯಾಗಿದೆ. ದಲಿತ ಸಮುದಾಯ ಕಂಡಿದ್ದ ಕನಸು ನುಚ್ಚು ನೂರಾಗಿದೆ.
ಆ ಸಂದರ್ಭದ ರಾಜಕೀಯದ ಜಿದ್ದಾಜಿದ್ದಿನಲ್ಲಿ ಹುಟ್ಟಿಕೊಂಡಿದ್ದ ಪ್ರಶ್ನೆಗಳಿಗೆ ದಲಿತ ಸಮುದಾಯವನ್ನು ವಂಚಿಸುವ ಮೂಲಕ ಐತಿಹಾಸಿಕ ಪ್ರಶ್ನೆಯಾಗಿದ್ದ ಪ್ರಶ್ನೆ ಮುಂದುವರಿದಿದೆ. ಗುಡುಗು ಹಾಕುವ ಫ್ಯೂಡಲ್ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಮಂಡಿಯೂರಿದೆ. ಇಲ್ಲಿ ಸೋತಿರುವುದು ಮಲ್ಲಿಕಾರ್ಜುನ ಖರ್ಗೆಯವರು ಅಲ್ಲ ಬದಲಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಎಂಬುದನ್ನು ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಸತತ 9 ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಪಕ್ಷ ನಿಷ್ಠ ರಾಜಕೀಯ ಮಾಡಿದ ಖರ್ಗೆಯವರಿಗೆ ಒಂದು ಅವಕಾಶ ನೀಡಿದರೆ ಕಾಂಗ್ರೆಸ್ ತಾನು ಪ್ರತಿಪಾದಿಸುತ್ತಿದ್ದ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದಂತ್ತಾಗುತ್ತಿತ್ತು. ಆದರೆ ದಿಲ್ಲಿಯಲ್ಲಿ ಕುಳಿತ ಸೋನಿಯಾ ಯಾವ ಆಧಾರದ ಮೇಲೆ ಮುಖ್ಯಮಂತ್ರಿ ಪಟ್ಟವನ್ನು ಮೂಲ ಕಾಂಗ್ರೆಸ್ಸಿಗರಲ್ಲದವರಿಗೆ ಮಣೆ ಹಾಕಿದರು ಎಂಬುದು ಕಾಂಗ್ರೆಸ್ ಪಕ್ಷದ ಹಿರಿಯಾಳುಗಳಲ್ಲಿ ಪ್ರಶ್ನೆಯಾಗಿಯೇ ಮುಂದುವರಿಯುತ್ತಿದೆ.