Wednesday, 22 August 2012

ನೈತಿಕ ಪೊಲೀಸರ ಸಮರ್ಥನೆ ಸಲ್ಲ

ಮಂಗಳೂರಿನ ಹೋಂ ಸ್ಟೇ ಮೇಲಿನ ದಾಳಿ ಪ್ರಕರಣ ಕುರಿತು ತಾವು ಸರ್ಕಾರಕ್ಕೆ ನೀಡಿದ ವರದಿಗೆ ಈಗಲೂ ಬದ್ಧ ಎಂದು  ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಸವಾಲು ಹಾಕುತ್ತಿರುವುದು ನೋಡಿದರೆ ಮಹಿಳೆಯರ ಬಗ್ಗೆ ಎಷ್ಟು ಗೌರವ ಇದೆ ಎಂಬುದು ಗೊತ್ತಾಗುತ್ತದೆ.
ನೈತಿಕ ಪೊಲೀಸರ ಗೂಂಡಾಗಿರಿ, ಹಿಂದೂ ಜಾಗರಣ ವೇದಿಕೆಯವರ ಚಾರಿತ್ರಿಕ ಹಿನ್ನೆಲೆ ಬಗ್ಗೆ ಮಾತನಾಡದ ಸಿ. ಮಂಜುಳಾ ಹಲ್ಲೆಗೊಳಗಾದವರ ಚರಿತ್ರೆ ಕೆದಕುತ್ತಿರುವುದು ನೀಚತನದ ಪರಮಾವಧಿ ಅಲ್ಲದೇ ಮತ್ತೇನು?
ದಾಳಿಯ ವೇಳೆ ೮ ಜನ ಯುವಕರಿದ್ದರು. ಮಾಧ್ಯಮಗಳಲ್ಲಿ ಒಬ್ಬನನ್ನು ಮಾತ್ರ ತೋರಿಸಿ ಇತರೆ ಏಳು ಜನರನ್ನು ಚಿತ್ರೀಕರಣ ಮಾಡಿದರೂ ಪ್ರಸಾರ ಮಾಡಿಲ್ಲ ಏಕೆ ಎಂದೆಲ್ಲ ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ ಈ ಅಧ್ಯಕ್ಷರಿಗೆ ಪೊಲೀಸರು ನೀಡಿದ ವರದಿಯಲ್ಲಿ ಎಲ್ಲಾ ಅಂಶಗಳು ಇದ್ದರು ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಗೃಹ ಇಲಾಖೆ ವರದಿ  ಪ್ರಕಾರ ರೇವ್ ಪಾರ್ಟಿ ಅಲ್ಲ ಎಂದು ಪೊಲೀಸ್
 ತನಿಖೆಯಿಂದ ಸಾಬೀತಾದರೂ ಈ ಮಂಜುಳಮ್ಮಗೆ ಏಕೆ ಅರ್ಥವಾಗುತ್ತಿಲ್ಲ.  ೮ ಜನ ಯುವಕರಲ್ಲಿ ಮದ್ಯಪಾನ ಮತ್ತು ಗಾಂಜಾ ಸೇವನೆ ಮಾಡಿದ್ದರು. ಅಲ್ಲಿ ಮಾದಕ ವಸ್ತುಗಳು ದೊರಕಿವೆ ಎಂದೆಲ್ಲಾ ಹಸಿ ಸುಳ್ಳು ಹೇಳುತ್ತಿರುವುದರ ಹಿಂದೆ ಕಾಣದ ಕೈಗಳ ಷಡ್ಯಂತ್ರವಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೋಂ ಸ್ಟೇ ಮಾಲೀಕರ ವಿರುದ್ಧ ತನಿಖೆಗೆ ಆಗ್ರಹಿಸುವ ಈ ಅಧ್ಯಕ್ಷರು ಸರ್ಕಾರವೇ ನಡೆಸುವ ಮಲ್ಪೆಯ ರೇವ್ ಪಾರ್ಟಿಯ ನಗ್ನತೆಯ ಬಗ್ಗೆ ಏಕೆ ಚಕಾರವೆತ್ತುವುದಿಲ್ಲ. ಸರ್ಕಾರ ಮತ್ತು ಹಿಂದೂ ಜಾಗರಣಾ ವೇದಿಕೆಯ ವಕ್ತಾರರಂತೆ ವರ್ತಿಸುತ್ತಿರುವ ಅಧ್ಯಕ್ಷರು ತನ್ನತನವನ್ನೇ ಮರೆತಿರುವುದು ವಿಷಾದನೀಯ ಸಂಗತಿ. ದಾಳಿಗೆ ಒಳಗಾದ ಯುವಕನ ತಾಯಿಯನ್ನು ಮಸಾಜ್ ಕೇಂದ್ರದಲ್ಲಿ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದ್ದರಿಂದ   ಬಂಧಿಸಲಾಗಿತ್ತು. ಅವರ ಮನೆಗೆ ಹೆಣ್ಣುಮಕ್ಕಳು ರಾತ್ರಿ ಬಂದು ಬೆಳಿಗ್ಗೆ ಹೋಗುತ್ತಿದ್ದರು ಎಂದು ಅಪವಾದ ಮಾಡುವ ಈ ಅಧ್ಯಕ್ಷರಿಗೆ ತಾನು ಹೆಣ್ಣು ಎಂಬುದನ್ನು ಮರೆತಂತಿದೆ.
ಪಾರ್ಟಿಯಲ್ಲಿ ಮಾದಕ ವಸ್ತುಗಳಿರಲಿಲ್ಲ ಎಂದು ಪೊಲೀಸರೇ ಹೇಳಿದರೂ ಕೂಡ ತನಿಖಾ ವರದಿಗೆ ಅವಮಾನ ಮಾಡುತ್ತಿರುವ ಮಂಜುಳಾರನ್ನು ಸರ್ಕಾರ ತಕ್ಷಣವೇ ಆಯೋಗದ ಅಧ್ಯಕ್ಷತೆಯಿಂದ ಕಿತ್ತು ಹಾಕಬೇಕು. ತಾವು ಹೇಳಿದ್ದೇ ವೇದವಾಕ್ಯ ಎನ್ನುತ್ತಿರುವ ಅಧ್ಯಕ್ಷರ ವರದಿಯನ್ನು ರದ್ದುಪಡಿಸಿ, ನಿಷ್ಪಕ್ಷಪಾತ ವರದಿ ತರಿಸಿಕೊಂಡು ವಿಳಂಬ ನೀತಿ ಅನುಸರಿಸದೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಗೃಹ ಇಲಾಖೆ ಹೊತ್ತವರು ಕೂಡಲೇ ಕಠಿಣ ಕ್ರಮ ಕೈಗೊಳ್ಳುವತ್ತ ಗಮನ ಹರಿಸಬೇಕು.


No comments:

Post a Comment